ಜಿಂದಗಿ ನಾ ಮಿಲೇಗಿ ದೋಬಾರಾ (ಅನುವಾದ: ಜೀವನ ಮತ್ತೊಮ್ಮೆ ಸಿಗುವುದಿಲ್ಲ) ೨೦೧೧ರ ಒಂದು ಹಿಂದಿ ಸ್ನೇಹ ಮತ್ತು ರಸ್ತೆ ಪ್ರಯಾಣಾಧಾರಿತ ಚಲನಚಿತ್ರ. ಇದನ್ನು ಜ಼ೋಯಾ ಅಖ್ತರ್ ನಿರ್ದೇಶಿಸಿದರು ಮತ್ತು ಎಕ್ಸೆಲ್ ಎಂಟರ್ಟೇನ್‍‍ಮೆಂಟ್‍ನ ಫರಾನ್ ಅಖ್ತರ್ ಹಾಗೂ ರಿತೇಶ್ ಸಿಧ್ವಾನಿ ನಿರ್ಮಿಸಿದರು. ಚಿತ್ರದಲ್ಲಿ ಹೃತಿಕ್‌ ರೋಷನ್‌, ಅಭಯ್ ಡಿಯೋಲ್, ಫ಼ರ್ಹಾನ್ ಅಖ್ತರ್, ಕಟ್ರೀನಾ ಕೈಫ಼್ ಮತ್ತು ಕಲ್ಕಿ ಕೆಕ್ಲ್ಞಾರನ್ನು ಒಳಗೊಂಡಿರುವ ಸಮೂಹ ಪಾತ್ರವರ್ಗವಿದೆ. ಇದನ್ನು ₹550 ದಶಲಕ್ಷದಷ್ಟು ಬಂಡವಾಳದಲ್ಲಿ ಸ್ಪೇನ್, ಭಾರತ, ಈಜಿಪ್ಟ್ ಮತ್ತು ಯುನೈಟಡ್ ಕಿಂಗ್ಡಮ್‍ನಲ್ಲಿ ಚಿತ್ರೀಕರಿಸಲಾಯಿತು. ಚಿತ್ರದ ಹಿನ್ನೆಲೆ ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ಶಂಕರ್-ಎಹಸಾನ್-ಲಾಯ್ ಸಂಯೋಜಿಸಿದರು. ಹಾಡುಗಳಿಗೆ ಸಾಹಿತ್ಯವನ್ನು ಜಾವೇದ್ ಅಕ್ತರ್ ಬರೆದರು. ಚಿತ್ರದ ಕಥೆಯು ಮೂರು ವಾರಗಳ ರಸ್ತೆ ಪ್ರಯಾಣಕ್ಕಾಗಿ ಮತ್ತೆ ಸೇರುವ ಮೂರು ಬಾಲ್ಯದ ಗೆಳೆಯರಾದ ಅರ್ಜುನ್, ಕಬೀರ್ ಹಾಗೂ ಇಮ್ರಾನ್‍ರನ್ನು ಅನುಸರಿಸುತ್ತದೆ. ಅವರು ಸ್ಪೇನ್‍ಗೆ ಪ್ರಯಾಣ ಮಾಡಿ ಅಲ್ಲಿ ಲೈಲಾನನ್ನು ಭೇಟಿಯಾಗುತ್ತಾರೆ. ಅವಳು ಅರ್ಜುನ್‍ನನ್ನು ಪ್ರೀತಿಸತೊಡಗಿ ಅವನಿಗೆ ಅವನ ಕೆಲಸಮಾಡುವ ತೀವ್ರ ಅಪೇಕ್ಷೆಯನ್ನು ಹತ್ತಿಕ್ಕಲು ನೆರವಾಗುತ್ತಾಳೆ. ಕಬೀರ್ ಮತ್ತು ಅವನ ನಿಶ್ಚಿತ ವಧು ನತಾಶಾ ಗಮನಾರ್ಹ ಮನಸ್ತಾಪಗಳನ್ನು ಅನುಭವಿಸುತ್ತಾರೆ. ಅವರ ಪ್ರಯಾಣದ ವೇಳೆ, ಪ್ರತಿಯೊಬ್ಬ ಸ್ನೇಹಿತನು ಆ ಗುಂಪು ಭಾಗವಹಿಸಲು ಒಂದು ಅಪಾಯಕಾರಿ ಕ್ರೀಡೆಯನ್ನು ಆಯ್ಕೆಮಾಡುತ್ತಾನೆ. ವಿಳಂಬದ ನಂತರ ಜ಼ಿಂದಗಿ ನಾ ಮಿಲೇಗಿ ದೋಬಾರಾ ೧೫ ಜುಲೈ ೨೦೧೧ರಂದು ಬಿಡುಗಡೆಯಾಯಿತು. ಚಿತ್ರವು ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಿಕವಾಗಿ ಯಶಸ್ವಿಯಾಯಿತು ಮತ್ತು ₹1.53 ಬಿಲಿಯನ್‍ನಷ್ಟು ಗಳಿಸಿತು. ಚಿತ್ರವು ಅದರ ನಟರ ಅಭಿನಯ, ಸಂಗೀತ, ಹಾಸ್ಯ ಮತ್ತು ನಿರ್ದೇಶನಕ್ಕಾಗಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು. ಚಿತ್ರಮಂದಿರಗಳಲ್ಲಿ ಪ್ರದರ್ಶನದ ನಂತರ, ಈ ಚಿತ್ರವು ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡು ಗೆದ್ದಿತು. == ಕಥಾವಸ್ತು == ಕುಟುಂಬದ ನಿರ್ಮಾಣ ವ್ಯವಹಾರದ ಭಾಗವಾಗಿರುವ ಕಬೀರ್ ತನ್ನ ಗೆಳತಿ ನತಾಶಾಳಿಗೆ ತಮ್ಮ ಮದುವೆಯ ಪ್ರಸ್ತಾಪ ಮಾಡುತ್ತಾನೆ. ಅವರ ಕುಟುಂಬಗಳು ನಿಶ್ಚಿತಾರ್ಥದ ಪಾರ್ಟಿಯಲ್ಲಿ ಭೇಟಿಯಾಗುತ್ತವೆ. ಕಬೀರ್ ತನ್ನ ಶಾಲಾ ಸ್ನೇಹಿತರೊಂದಿಗೆ ಮೂರು ವಾರಗಳ ಬ್ರಹ್ಮಚಾರಿ ರಸ್ತೆ ಪ್ರವಾಸವನ್ನು ಯೋಜಿಸುತ್ತಿದ್ದಾನೆ ಎಂದು ನತಾಶಾಳಿಗೆ ಅಲ್ಲಿ ಗೊತ್ತಾಗುತ್ತದೆ – ಇಮ್ರಾನ್, ಒಬ್ಬ ಜಾಹೀರಾತು ಬರಹಗಾರ; ಮತ್ತು ಅರ್ಜುನ್, ಲಂಡ‍ನ್‍ನಲ್ಲಿ ಕೆಲಸಮಾಡುತ್ತಿರುವ ಒಬ್ಬ ಹಣಕಾಸು ದಳ್ಳಾಳಿ. ಮೂರು ಗೆಳೆಯರ ಮಧ್ಯೆ ಬಹಳ ಕಾಲದಿಂದಿರುವ ಒಪ್ಪಂದವಿದೆ, ಮತ್ತು ರಸ್ತೆ ಪ್ರಯಾಣದ ವೇಳೆ ಪ್ರತಿಯೊಬ್ಬರು ಒಂದು ಸಾಹಸ ಕ್ರೀಡೆಯನ್ನು ಆಯ್ಕೆ ಮಾಡುವರು ಮತ್ತು ಮೂವರೂ ಅದನ್ನು ಒಟ್ಟಾಗಿ ಪ್ರಯತ್ನಿಸುವರು ಎಂದು ಕಬೀರ್ ಹೇಳುತ್ತಾನೆ. ಆರಂಭದಲ್ಲಿ ಅರ್ಜುನ್ ಪ್ರವಾಸಕ್ಕೆ ಹೋಗಲು ಇಷ್ಟವಿರುವುದಿಲ್ಲ ಏಕೆಂದರೆ ಅವನಿಗೆ ಕೆಲಸ ತಪ್ಪಿಸುವುದನ್ನು ಬಯಸಿರುವುದಿಲ್ಲ. ಇಮ್ರಾನ್ ರಹಸ್ಯವಾಗಿ ತನಗೆ ಜನ್ಮನೀಡಿದ ಬೇರ್ಪಟ್ಟ ತಂದೆಯಾದ, ಸ್ಪೇನ್‍ನಲ್ಲಿರುವ ಒಬ್ಬ ಕಲಾವಿದನಾದ ಸಲ್ಮಾನ್ ಹಬೀಬ್‍ನನ್ನು ಹುಡುಕಲು ಯೋಜಿಸುತ್ತಾನೆ. ಮೂರೂ ಪುರುಷರು ಸ್ಪೇನ್‍ಗೆ ಬೇರೆಬೇರೆಯಾಗಿ ಹೊರಟು ಬಾರ್ಸಲೋನಾದಲ್ಲಿ ಸೇರುತ್ತಾರೆ. ಅವರು ಕೋಸ್ಟ ಬ್ರಾವಾ, ಸೆವಿಯಾ ಮತ್ತು ಪಾಂಪ್ಲೋನಾಗೆ ಭೇಟಿಕೊಡಲು ಯೋಜಿಸುತ್ತಾರೆ. ಕೋಸ್ಟ ಬ್ರಾವಾದ ದಾರಿಯಲ್ಲಿ, ಕಾರ್ಯವ್ಯಸನಿಯಾದ ಅರ್ಜುನ್ ಕೆಲಸಮಾಡುವುದನ್ನು ಮುಂದುವರಿಸಿದಾಗ, ಇಮ್ರಾನ್ ಮತ್ತು ಕಬೀರ್ ಕಿರಿಕಿರಿಗೊಳ್ಳುತ್ತಾರೆ. ಇಮ್ರಾನ್ ಆಕಸ್ಮಿಕವಾಗಿ ಅರ್ಜುನ್‍ನ ಮೊಬೈಲ್ ಫ಼ೋನನ್ನು ಕಾರಿನಾಚೆಗೆ ಎಸೆಯುತ್ತಾನೆ. ಇದರಿಂದ ವಾದ ಶುರುವಾಗಿ, ನಾಲ್ಕು ವರ್ಷ ಮುಂಚೆ ತನ್ನ ಆಗಿನ ಗೆಳತಿಯಾಗಿದ್ದ ಸೋನಾಲಿಯೊಂದಿಗೆ ಇಮ್ರಾನ್ ಅನೈತಿಕ ಸಂಬಂಧ ಹೊಂದಿದ್ದನು ಎಂದು ಅರ್ಜುನ್ ಆರೋಪ ಹೊರಿಸುತ್ತಾನೆ. ಆದರೆ, ಅವರಿಬ್ಬರನ್ನು ಸಮಾಧಾನಪಡಿಸಿದ ಅರ್ಜುನ್ ಆ ವಾದವನ್ನು ಅಂತ್ಯಗೊಳಿಸುತ್ತಾನೆ. ತಮ್ಮ ಗಮ್ಯಸ್ಥಾನವನ್ನು ತಲುಪಿದ ಮೇಲೆ ಅವರು ಒಬ್ಬ ಆಂಗ್ಲೋ-ಇಂಡಿಯನ್‌ ಮಹಿಳೆಯಾದ ಲೈಲಾಳನ್ನು ಭೇಟಿಯಾಗುತ್ತಾರೆ; ಇಮ್ರಾನ್ ಅವಳೊಂದಿಗೆ ಚೆಲ್ಲಾಟವಾಡಿ ಅರ್ಜುನ್‍ನನ್ನು ಅಸೂಯೆಪಡಿಸುತ್ತಾನೆ. ತಮ್ಮ ಮೊದಲ ಕ್ರೀಡೆಯಾಗಿ ತಾನು ನೀರೊಳಗಿನ ಧುಮುಕುವಿಕೆಯನ್ನು ಎಂದು ಕಬೀರ್ ಘೋಷಿಸುತ್ತಾನೆ, ಮತ್ತು ಲೈಲಾ ತಮ್ಮ ಡೈವಿಂಗ್ ಬೋಧಕಿಯಾಗಿದ್ದಾಳೆಂದು ನಂತರ ಅವರ ಕಂಡುಕೊಳ್ಳುತ್ತಾರೆ. ಈಜಲು ಬಾರದ ಅರ್ಜುನ್ ಜಲಭೀತಿಯನ್ನು ಹೊಂದಿರುತ್ತಾನೆ. ತನ್ನ ಭಯಗಳನ್ನು ಜಯಿಸಲು ಮತ್ತು ಕ್ರೀಡೆಯನ್ನು ಯಶಸ್ವಿಯಾಗಿ ಮುಗಿಸಲು ಅವನು ಲೈಲಾಳಿಂದ ನೆರವು ಪಡೆಯುತ್ತಾನೆ. ಅವರು ಅವಳೊಂದಿಗೆ ಬುನ್ಯೋಲ್‍ನಲ್ಲಿ ಲಾ ಟೋಮಟೀನಾ ಉತ್ಸವದಲ್ಲಿ ಭಾಗವಹಿಸಬೇಕೆಂಬ ಸಲಹೆ ನೀಡುತ್ತಾಳೆ. ಈ ನಡುವೆ, ಲೈಲಾಳನ್ನು ರಾತ್ರಿಯ ಊಟಕ್ಕಾಗಿ ಹುಡುಗರ ಹೋಟೆಲಿಗೆ ಆಹ್ವಾನಿಸಿದ ಅವರನ್ನು ವೆಬ್‍ಕ್ಯಾಮ್ ಮೂಲಕ ನೋಡಿದಾಗ ನತಾಶಾ ಕಬೀರ್ ಮತ್ತು ಲೈಲಾಳ ನಡುವಿನ ಸಂಬಂಧದ ಬಗ್ಗೆ ಅನುಮಾನ ಪಡುತ್ತಾಳೆ. ಅವಳು ಕಬೀ‍ರ್‌ನ ಬ್ಯಾಚಲರ್ ಪಾರ್ಟಿ ಪ್ರವಾಸಕ್ಕೆ ಕರೆಯದೆ ನುಗ್ಗುತ್ತಾಳೆ, ಮತ್ತು ಇದು ಕಬೀರ್‌ಗೆ ಅಸುಖವುಂಟುಮಾಡುತ್ತದೆ. ಇಮ್ರಾನ್ ಲೈಲಾಳ ಗೆಳತಿ ನೂರಿಯಾಳೊಂದಿಗೆ, ಮತ್ತು ಅರ್ಜುನ್ ಲೈಲಾಳೊಂದಿಗೆ ಸಮಯ ಕಳೆಯುತ್ತಾನೆ. ಮೂವರೂ ಹೊರಟ ಮೇಲೆ, ಅರ್ಜುನ್ ಮತ್ತು ಲೈಲಾರಿಗೆ ತಾವು ಪರಸ್ಪರ ಪ್ರೀತಿಸುತ್ತಿದ್ದೇವೆಂದು ಅರಿವಾಗುತ್ತದೆ ಮತ್ತು ತಮ್ಮ ಬೇರ್ಪಡಿಕೆಯ ವಿಷಾದವಾಗದಿರಲು, ಲೈಲಾ ಮೋಟರ್‌ಸೈಕಲ್‍ನಲ್ಲಿ ಅವರನ್ನು ಬೆನ್ನಟ್ಟಿ ಭೇಟಿಯಾಗಿ ವಿದಾಯ ಹೇಳುವ ಮುನ್ನ ಅರ್ಜುನ್‍ನನ್ನು ರಾಗೋನ್ಮತ್ತದಿಂದ ಚುಂಬಿಸುತ್ತಾಳೆ. ಸೆವಿಯಾಗೆ ಹೋಗುವಾಗ, ಕಬೀರ್ ನತಾಶಾಳನ್ನು ವಿಮಾನನಿಲ್ದಾಣದಲ್ಲಿ ಇಳಿಸುತ್ತಾನೆ. ಅರ್ಜುನ್ ಮತ್ತು ಇಮ್ರಾನ್ ನತಾಶಾಳ ಸುತ್ತ ಕಬೀರ್‌ನ ವರ್ತನೆಯಲ್ಲಿನ ಬದಲಾವಣೆಯನ್ನು ಚರ್ಚಿಸುತ್ತಾರೆ. ನಂತರ ಮೂವರೂ ಅರ್ಜುನ್‍ನ ಆಯ್ಕೆಯಾದ ಧುಮುಕುಕೊಡೆ ಜಿಗಿತದಲ್ಲಿ ಭಾಗವಹಿಸಲು ಸೆವಿಯಾಗೆ ಹೋಗುತ್ತಾರೆ. ಆ ಕಾರ್ಯದ ವೇಳೆ, ಇಮ್ರಾನ್ ಒತ್ತಾಯದಿಂದ ತನ್ನ ಔನ್ನತ್ಯಭೀತಿಯನ್ನು ಎದುರಿಸಬೇಕಾಗುತ್ತದೆ. ಅವನು ಭಾಗವಹಿಸಲು ಹಿಂಜರಿದರೂ ಅಂತಿಮವಾಗಿ ಭಾಗವಹಿಸುತ್ತಾನೆ. ಜಿಗಿತದ ನಂತರ, ಮೂವರೂ ಒಂದು ಬಾರ್‌ಗೆ ಹೋಗಿ ಪಾನಮತ್ತರಾಗುತ್ತಾರೆ. ಅವರು ಒಬ್ಬ ಅಪರಿಚಿತನ ಮೇಲೆ ಕೀಟಲೆ ಮಾಡಲು ಪ್ರಯತ್ನಿಸಿ ಜಗಳಾಡುತ್ತಾರೆ. ಜಗಳದ ನಂತರ ಅವರು ಜೈಲಿಗೆ ಸೇರುತ್ತಾರೆ; ಇಮ್ರಾನ್ ಸಲ್ಮಾನ್‍ಗೆ ಕರೆಮಾಡಿದಾಗ ಅವನು ಅವರಿಗೆ ಜಾಮೀನುಕೊಡಿಸಿ ತನ್ನ ಮನೆಗೆ ಕರೆದೊಯ್ಯುತ್ತಾನೆ. ತಾನು ಎಂದೂ ವೈವಾಹಿಕ ಜೀವನ ಅಥವಾ ಮಕ್ಕಳ ಜವಾಬ್ದಾರಿಯನ್ನು ಬಯಸಿರಲಿಲ್ಲ ಆದರೆ ಇಮ್ರಾನ್‍ನ ತಾಯಿ ರಾಹೀಲಾ ಬಯಸಿದ್ದಳು ಎಂದು ಸಲ್ಮಾನ್ ಹೇಳುತ್ತಾನೆ. ತನ್ನ ಕೃತ್ಯಗಳು ನಾಲ್ಕು ವರ್ಷಗಳ ಹಿಂದೆ ಅರ್ಜುನ್‍ಗೆ ಎಷ್ಟು ನೋವು ಮಾಡಿರಬೇಕೆಂದು ಭಗ್ನಹೃದಯಿಯಾದ ಇಮ್ರಾನ್‍ಗೆ ಅರಿವಾಗುತ್ತದೆ. ಅವನು ಅರ್ಜು‍ನ್‍ನ ಕ್ಷಮೆಬೇಡುತ್ತಾನೆ. ಅವನ ಕ್ಷಮೆಯ ಪ್ರಾಮಾಣಿಕತೆಯನ್ನು ನೋಡಿ ಅರ್ಜುನ್ ಅವನನ್ನು ಅಪ್ಪಿಕೊಂಡು ಕ್ಷಮಿಸುತ್ತಾನೆ. ಮೂವರಿಗೆ ಪಾಂಪ್ಲೋನಾದಲ್ಲಿನ ಗೂಳಿಗಳ ಓಟದ ಬಗ್ಗೆ ಗೊತ್ತಾಗುತ್ತದೆ. ಇದು ಇಮ್ರಾನ್‍ನ ಆಯ್ಕೆಯಾಗಿದ್ದು ಕಬೀರ್ ಮತ್ತು ಅರ್ಜುನ್‌ರನ್ನು ಕಕ್ಕಾಬಿಕ್ಕಿ ಮಾಡುತ್ತದೆ. ಇಮ್ರಾನ್ ಲೈಲಾಳನ್ನು ಸಂಪರ್ಕಿಸಿದಾಗ ಅವಳು ಅವರೊಂದಿಗೆ ಸೇರಿಕೊಳ್ಳುತ್ತಾಳೆ. ತನ್ನ ಸ್ನೇಹಿತರು ಎದುರುಬಿದ್ದಾಗ, ತಾನು ನತಾಶಾಳನ್ನು ಪ್ರೀತಿಸುತ್ತಿಲ್ಲ ಮತ್ತು ಮದುವೆಗೆ ಸಿದ್ಧನಾಗಿಲ್ಲ ಎಂದು ಕಬೀರ್ ಒಪ್ಪಿಕೊಳ್ಳುತ್ತಾನೆ. ತನ್ನ ಅಮ್ಮನಿಗಾಗಿ ಹುಟ್ಟುಹಬ್ಬದ ಉಡುಗೊರೆಯಾಗಿ ಖರೀದಿಸಿದ್ದ ಒಂದು ಉಂಗುರವನ್ನು ತನಗಾಗಿ ತಂದ ಪ್ರಸ್ತಾಪದ ಉಂಗುರವೆಂದು ನತಾಶಾ ತಪ್ಪುತಿಳಿದಿದ್ದಳು ಎಂದು ಅವನು ಹೇಳುತ್ತಾನೆ. ಈ ಕಾರಣದಿಂದಲೇ ಪ್ರವಾಸವು ಅವನಿಗೆ ಅಷ್ಟು ಮುಖ್ಯವಾಗಿತ್ತೇ ಎಂದು ಕಬೀರ್‌ನನ್ನು ಅರ್ಜುನ್ ಕೇಳುತ್ತಾನೆ; ಏಕೆಂದರೆ ಅವನ ಇಬ್ಬರು ಆಪ್ತಮಿತ್ರರ ಹೊರತಾಗಿ ಬೇರೆ ಯಾರೂ ಅವನಿಗೆ ಮದುವೆಯನ್ನು ರದ್ದುಮಾಡಲು ಹೇಳುತ್ತಿರಲಿಲ್ಲ. ಗೂಳಿ ಓಟದ ಬೆಳಿಗ್ಗೆ, ತಾವು ಮತ್ತೊಂದು ಒಪ್ಪಂದವನ್ನು ಮಾಡಿಕೊಳ್ಳಬೇಕೆಂದು ಇಮ್ರಾನ್ ಪ್ರಸ್ತಾಪಿಸುತ್ತಾನೆ: ಅವರು ಘಟನೆಯಲ್ಲಿ ಉಳಿದುಕೊಂಡರೆ, ಇಮ್ರಾನ್ ತಾನು ದಿನಚರಿ ಪುಸ್ತಕದಲ್ಲಿ ಬರೆದಿರುವ ಕವನಗಳನ್ನು ಪ್ರಕಟಿಸುವ ಶಪಥಮಾಡುತ್ತಾನೆ, ಅರ್ಜುನ್ ಲೈಲಾಳೊಂದಿಗೆ ಮೊರೊಕ್ಕೊಗೆ ಹೋಗುವ ಶಪಥಮಾಡುತ್ತಾನೆ, ಮತ್ತು ಕಬೀರ್ ತಾನು ಈಗಲೇ ನತಾಶಾಳನ್ನು ಮದುವೆಯಾಗಲು ಬಯಸುವುದಿಲ್ಲ ಎಂದು ಅವಳಿಗೆ ಹೇಳುವುದಾಗಿ ಮಾತುಕೊಡುತ್ತಾನೆ. ಆ ಕಾರ್ಯಕ್ರಮವನ್ನು ಮುಗಿಸಿದಾಗ, ಆ ಗೆಳೆಯರು ತಮ್ಮತಮ್ಮೊಳಗಿನ, ತಮ್ಮ ಕುಟುಂಬಗಳೊಂದಿಗಿನ, ಗೆಳೆಯರೊಂದಿಗಿನ, ಮತ್ತು ತಮ್ಮೊಳಗಿನ ಸಂಬಂಧಗಳ ನವೀಕೃತ ಭಾವವನ್ನು ಪ‌ಡೆಯುತ್ತಾರೆ. ಅಂತ್ಯದ ಹೆಸರುಗಳ ಉಲ್ಲೇಖದಲ್ಲಿ, ಇಮ್ರಾನ್, ಕಬೀರ್, ನೂರಿಯಾ ಮತ್ತು ನತಾಶಾ ಮೊರೊಕ್ಕೊದಲ್ಲಿ ಅರ್ಜುನ್ ಮತ್ತು ಲೈಲಾರ ವಿವಾಹಕ್ಕೆ ಹಾಜರಾಗುತ್ತಾರೆ. ನತಾಶಾ ಈಗಲೂ ಕಬೀರ್‌ನ ಗೆಳತಿಯಾಗಿದ್ದಾಳೆ, ಮತ್ತು ಇಮ್ರಾನ್‌ನ ಕವನಗಳು ಪ್ರಕಟಿತವಾಗಿವೆ ಎಂದು ಬಹಿರಂಗಗೊಳ್ಳುತ್ತದೆ. == ಪಾತ್ರವರ್ಗ == ಅರ್ಜುನ್ ಸಲೂಜಾ ಆಗಿ ಹೃತಿಕ್ ರೋಶನ್ ಕಬೀರ್ ದೀವಾನ್ ಆಗಿ ಅಭಯ್ ಡಿಯೋಲ್ ಇಮ್ರಾನ್ ಕುರೇಶಿ ಆಗಿ ಫ಼ರ್ಹಾನ್ ಅಖ್ತರ್ ಲೈಲಾ ಆಗಿ ಕಟ್ರೀನಾ ಕೈಫ಼್ ನತಾಶಾ ಅರೋರಾ ಆಗಿ ಕಲ್ಕಿ ಕೆಕ್ಲ್ಞಾ ನೂರಿಯಾ ಆಗಿ ಏರಿಯಾಡ್ನಾ ಕಾಬ್ರೋಲ್ ಸಲ್ಮಾನ್ ಹಬೀಬ್ ಆಗಿ ನಸೀರುದ್ದೀನ್ ಷಾ ರಾಹಿಲಾ ಕುರೇಶಿ ಆಗಿ ದೀಪ್ತಿ ನವಲ್ ನತಾಶಾಳ ತಂದೆಯಾಗಿ ಸುಹೇಲ್ ಸೇಠ್ == ತಯಾರಿಕೆ == === ಬೆಳವಣಿಗೆ === ನವಂಬರ್ ೨೦೦೯ ರಲ್ಲಿ, ನಿರ್ದೇಶಕಿ ಮತ್ತು ಬರಹಗಾರ್ತಿಯರಾದ ಜ಼ೋಯಾ ಅಖ್ತರ್ ಮತ್ತು ರೀಮಾ ಕಾಗ್ತಿ ಮೂರು ತಿಂಗಳ ಕೆಲಸದ ನಂತರ ಚಿತ್ರದ ಕಥೆಯನ್ನು ಬರೆಯುವುದು ಮುಗಿಸಿದರು. ಫ಼ರ್ಹಾನ್ ಚಿತ್ರದ ಸಂಭಾಷಣೆಗಳನ್ನು ಬರೆದರು. "ಜೀವನದಲ್ಲಿ ಸಮರ್ಪಣೆಗಳನ್ನು ಮಾಡುವ ಆರಂಭದಲ್ಲಿರುವ ಮೂರು ವ್ಯಕ್ತಿಗಳು" ಎಂಬುವುದು ಚಿತ್ರದ ವಸ್ತುವಾಗಿತ್ತು. ಪ್ರಧಾನ ಛಾಯಾಗ್ರಹಣದ ಸ್ಥಳವಾಗಿ ಮೆಕ್ಸಿಕೊ ಮೊದಲ ಆಯ್ಕೆಯಾಗಿತ್ತು ಆದರೆ ನಂತರ ಸ್ಪೇನ್‍ಗೆ ಬದಲಾಯಿಸಲಾಯಿತು. === ಪಾತ್ರ ನಿರ್ಧಾರಣ === ಆರಂಭದಲ್ಲಿ, ಮುಖ್ಯಪಾತ್ರಗಳಿಗೆ ನಿರ್ಮಾಪಕರು ಇತರ ನಟರನ್ನು ಬಯಸಿದ್ದರು. ಚಿತ್ರದಲ್ಲಿ ಫ಼ರ್ಹಾನ್ ಅಖ್ತರ್‌ರನ್ನು ಮೊಟ್ಟಮೊದಲು ಸೇರಿಸಿಕೊಳ್ಳಲಾಯಿತು. ನಂತರ ಉಳಿದಿಬ್ಬರನ್ನು ಸೇರಿಸಿಕೊಳ್ಳಲಾಯಿತು. === ಚಿತ್ರೀಕರಣ === ಪ್ರಧಾನ ಛಾಯಾಗ್ರಹಣವು ಜೂನ್ ೨೦೧೦ ರಲ್ಲಿ ಶುರುವಾಯಿತು ಮತ್ತು ಯುನೈಟಡ್ ಕಿಂಗ್ಡಮ್, ಈಜಿಪ್ಟ್, ಮುಂಬಯಿ ಮತ್ತು ಸ್ಪೇನ್‍ನಲ್ಲಿ ನಡೆಯಿತು. ಕೈಫ಼್‍ರ ಪರಿಚಯ ದೃಶ್ಯವನ್ನು ನಗ್ನಪಂಥಿ ಬೀ‍ಚ್‍ನಲ್ಲಿ ಚಿತ್ರೀಕರಿಸಲಾಯಿತು. ಲಾ ಟೋಮಟೀನಾ ಉತ್ಸವವನ್ನು ಒಂದು ಹಾಡಿನಲ್ಲಿ ಮರುಸೃಷ್ಟಿಸಲಾಯಿತು; ಸುಮಾರ್ಯ್ ಹದಿನಾರು ಟನ್ ಟೊಮೇಟೊಗಳನ್ನು ಬಳಸಲಾಯಿತು. == ಧ್ವನಿವಾಹಿನಿ == ಶಂಕರ್-ಎಹಸಾನ್-ಲಾಯ್ ಈ ಚಲನಚಿತ್ರದ ಧ್ವನಿವಾಹಿನಿಯನ್ನು ಸಂಯೋಜಿಸಿದರು. ಜಾವೇದ್ ಅಖ್ತರ್ ಹಾಡುಗಳಿಗೆ ಸಾಹಿತ್ಯವನ್ನು ಬರೆದರು. "ಸೆನ್ಯೋರೀಟಾ" ಹಾಡನ್ನು ಹಾಡಲು ಸಂಯೋಜಕರು ಒಬ್ಬ ಸ್ಪ್ಯಾನಿಶ್ ಫ಼್ಲಮೆಂಕೊ ಗಾಯಕಿಯಾದ ಮಾರಿಯಾ ಡೆಲ್ ಮಾರ್ ಫ಼ರ್ನಾಂಡೇಜ಼್‍ರನ್ನು ಗೊತ್ತುಮಾಡಿಕೊಂಡರು. ಈ ಹಾಡನ್ನು ಚಿತ್ರದ ಮುಖ್ಯ ನಟರಾದ ಅಭಯ್ ಡಿಯೋಲ್, ಹೃತಿಕ್ ರೋಶನ್ ಮತ್ತು ಫ಼ರ್ಹಾನ್ ಅಖ್ತರ್ ಹಾಡಿದರು. == ಬಿಡುಗಡೆ == ಎರಡು ಬಾರಿ ಮುಂದೂಡಲ್ಪಟ್ಟು ಜ಼ಿಂದಗಿ ನಾ ಮಿಲೇಗಿ ದೋಬಾರಾ ಅಂತಿಮವಾಗಿ ೧೫ ಜುಲೈ ೨೦೧೧ರಂದು ಬಿಡುಗಡೆಯಾಯಿತು. ಶಾರುಖ್ ಖಾನ್‍ರ ನಿವಾಸದಲ್ಲಿ ಚಿತ್ರದ ವಿಶೇಷ ಪ್ರದರ್ಶವನ್ನು ೧೬ ಜುಲೈಯಂದು ಏರ್ಪಡಿಸಲಾಯಿತು. ಚಿತ್ರದ ನಿರ್ಮಾಪಕರು ಮುಂಬಯಿಯಲ್ಲಿನ ಸುಮಾರು ೧೦ ಚಿತ್ರಮಂದಿರಗಳಿಂದ ಸಂಗ್ರಹಿತ ಹಣವನ್ನು ಮಹಾರಾಷ್ಟ್ರ ಸರ್ಕಾರಕ್ಕೆ ಬಾಂಬ್ ದಾಳಿಯಲ್ಲಿ ಆಹುತಿಯಾದವರಿಗೆ ದಾನದ ಸಂಕೇತವಾಗಿ ನೀಡಿದರು. === ಬಾಕ್ಸ್ ಆಫ಼ಿಸ್ === ೧೭ ದಿನಗಳಲ್ಲಿ, ಇದು ಭಾರತದಲ್ಲಿ ₹700 ದಶಲಕ್ಷಕ್ಕಿಂತ ಹೆಚ್ಚು ಹಣಗಳಿಸಿತು. ಇದನ್ನು ಭಾರತದಲ್ಲಿ ಮತ್ತು ವಿದೇಶದ ಪ್ರದೇಶಗಳಲ್ಲಿ ಸೂಪರ್-ಹಿಟ್ ಎಂದು ಘೋಷಿಸಲಾಯಿತು. ಜನೆವರಿ ೨೦೧೨ ರ ವೇಳೆಗೆ, ಚಿತ್ರವು ವಿದೇಶದಲ್ಲಿ $7.25 ದಶಲಕ್ಷದಷ್ಟು ಹಣ ಗಳಿಸಿತ್ತು. === ವಿವಾದಗಳು === ಜ಼ಿಂದಗಿ ನಾ ಮಿಲೇಗಿ ದೋಬಾರಾದ ಬಿಡುಗಡೆಯ ನಂತರ ಪ್ರಾಣಿ ಹಕ್ಕುಗಳ ಸಂಸ್ಥೆಯಾದ ಪೆಟಾ ಗೂಳಿಗಳ ಓಟದ ದೃಶ್ಯಕ್ಕೆ ಆಕ್ಷೇಪಿಸಿತು ಮತ್ತು ಚಿತ್ರವನ್ನು ನಿಷೇಧಿಸಲು ಅಭಿಮಾನಿಗಳಿಂದ ಬೆಂಬಲ ಕೇಳಿತು. ಯಾವುದೇ ಪ್ರಾಣಿಗೆ ಹಿಂಸೆ ಮಾಡಲಾಗಿಲ್ಲ ಮತ್ತು ಸೆನ್ಸರ್ ಮಂಡಳಿಯು ಚಿತ್ರಕ್ಕೆ ಒಪ್ಪಿಗೆ ನೀಡಿದೆ ಎಂದು ಚಿತ್ರದ ನಿರ್ಮಾಪಕರು ಹೇಳಿದರು. == ಪ್ರಶಸ್ತಿ ಗೌರವಗಳು == ೫೯ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ, ಜ಼ಿಂದಗಿ ನಾ ಮಿಲೇಗಿ ದೋಬಾರಾ ಅತ್ಯುತ್ತಮ ಶ್ರವ್ಯ ನಿರ್ದೇಶನ ಮತ್ತು ಅತ್ಯುತ್ತಮ ನೃತ್ಯ ನಿರ್ದೇಶನ ವರ್ಗಗಳಲ್ಲಿ ಎರಡು ಪ್ರಶಸ್ತಿಗಳನ್ನು ಗೆದ್ದಿತು. ಈ ಚಿತ್ರವು ಪ್ರಾದೇಶಿಕ ಸಮಾರಂಭಗಳಲ್ಲಿಯೂ ಹಲವಾರು ಪ್ರಶಸ್ತಿಗಳನ್ನು ಗೆದ್ದಿತು, ಮುಖ್ಯವಾಗಿ ಅತ್ಯುತ್ತಮ ಚಲನಚಿತ್ರ ಮತ್ತು ಅತ್ಯುತ್ತಮ ನಿರ್ದೇಶಕಿಗಾಗಿ; ಇವುಗಳಲ್ಲಿ ಫಿಲ್ಮ್ ಫೇರ್ ಪ್ರಶಸ್ತಿಗಳು, ಸ್ಟಾರ್‌ಡಸ್ಟ್ ಪ್ರಶಸ್ತಿಗಳು, ಜ಼ೀ ಸಿನೆ ಪ್ರಶಸ್ತಿಗಳು, ಐಐಎಫ಼್ಎ ಪ್ರಶಸ್ತಿಗಳು, ಸ್ಕ್ರೀನ್ ಪ್ರಶಸ್ತಿಗಳು, ಮತ್ತು ಏಷ್ಯನ್ ಚಲನಚಿತ್ರ ಪ್ರಶಸ್ತಿಗಳು ಸೇರಿವೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು ==